೨೦೦೭ನೇ ಸಾಲಿನ ನೀನಾಸಂ ನಾಟಕೋತ್ಸವ ಅಕ್ಟೋಬರ್ ತಿಂಗಳ ೧೨, ೧೩ಕ್ಕೆ ಶಿವಮೊಗ್ಗದ ಕುವೆಂಪು ರಂಗಮಂದಿರದಲ್ಲಿ ನಡೆಯಿತು. ಕೆ.ವಿ. ಅಕ್ಷರ ನಿರ್ದೇಶನದಲ್ಲಿ ಸ್ವಯಂವರ ಲೋಕ ಹಾಗೂ ನಟರಾಜ ಹೊನ್ನವಳ್ಳಿ ನಿರ್ದೇಶನದ ನಟನಾರಾಯಣಿ ನಾಟಕಗಳು ಪ್ರದರ್ಶನಗೊಂಡವು.
ನಮ್ಟೀಮ್ ಪ್ರಸ್ತಾಪವಿಲ್ಲದೆ ಶಿವಮೊಗ್ಗ ಜಿಲ್ಲೆಯ ರಂಗ ಚಟುವಟಿಕೆ ಕುರಿತು ಮಾತನಾಡಲು ಸಾಧ್ಯವಿಲ್ಲ. ಏಕೆಂದರೆ ಕಳೆದ ೮ ವರ್ಷದಲ್ಲಿ ನಮ್ಟೀಮ್ ಈ ಕ್ಷೇತ್ರದಲ್ಲಿ ಮಾಡಿರುವ ಸಾಧನೆ ನಿರ್ಲಕ್ಷಿಸಲು ಸಾಧ್ಯವಿಲ್ಲ. ಹಲವು ವಿನೂತನ ಪ್ರಯೋಗಗಳನ್ನು ನಮ್ಟೀಮ್ ಪ್ರೇಕ್ಷಕರಿಗೆ ನೀಡಿದೆ. ಅಲ್ಲದೆ ನಾಡಿನ ಖ್ಯಾತ ರಂಗತಂಡಗಳನ್ನು ಶಿವಮೊಗ್ಗಕ್ಕೆ ಆಹ್ವಾನಿಸಿ ನಾಟಕಗಳನ್ನು ಆಯೋಜಿಸಿದೆ. ಹಲವು ರಾಜ್ಯಮಟ್ಟದ ಸ್ಪರ್ಧೆಗಳಲ್ಲಿ ಭಾಗವಹಿಸಿ ಪ್ರಶಸ್ತಿ ಪಡೆದಿದೆ. ನಮ್ಟೀಮ್ ನಾಟಕಗಳು ಕರ್ನಾಟಕ ನಾಟಕ ಅಕಾಡೆಮಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸೇರಿದಂತೆ ಹಲವು ಸಂಸ್ಥೆಗಳು ಆಯೋಜಿಸಿದ್ದ ಉತ್ಸವಗಳಲ್ಲಿ ನಾಟಕಗಳನ್ನು ಪ್ರದರ್ಶಿಶಿಸಿದೆ. ಶಿವಮೊಗ್ಗದಲ್ಲಿ ಹಲವು ರಂಗೋತ್ಸವಗಳನ್ನು ನಮ್ಟೀಮ್ ಆಯೋಜಿಸಿದೆ. ರಂಗಸುಗ್ಗಿ, ರಂಗರಂಗು, ಚಳಿಗಾಲದ ನಾಟಕೋತ್ಸವ, ನೀನಾಸಂ ನಾಟಕೋತ್ಸವ ಸೇರಿದಂತೆ ಹಲವು ಉತ್ಸವಗಳು ನಮ್ಟೀಮ್ ಖ್ಯಾತಿಗೆ ಸೇರಿವೆ. ಸ್ವಂತ ಪ್ರಯೋಗಗಳಷ್ಟೇ ಅಲ್ಲದೆ ನಾಡಿನ ಖ್ಯಾತ ರಂಗತಂಡಗಳ ೪೩ ನಾಟಕಗಳನ್ನು ಶಿವಮೊಗ್ಗದ ಪ್ರೇಕ್ಷಕರಿಗೆ ನೀಡಿದೆ. ನೀನಾಸಂ, ನೇಪಥ್ಯ, ಪ್ರೋಥಿಯೂ, ಚಿಣ್ಣಬಣ್ಣ , ಕಿನ್ನರ ಮೇಳ, ಶಿವ ಸಂಚಾರ ಸೇರಿದಂತೆ ಹಲವು ತಂಡಗಳ ನಾಟಕಗಳನ್ನು ಶಿವಮೊಗ್ಗದಲ್ಲಿ ಆಯೋಜಿಸಿದೆ. ಮಕ್ಕಳ ರಂಗಭೂಮಿಗೆ ಪ್ರೋತ್ಸಾಹ ಕೊಡುವ ಉದ್ದೇಶದಿಂದ ಶಾಲೆಗಳನ್ನು ದತ್ತು ತೆಗೆದುಕೊಂಡು ಮಕ್ಕಳಿಗಾಗಿ ನಾಟಕ ಕಲಿಸುವ ಯೋಜನೆ ಜಾರಿಯಲ್ಲಿಟ್ಟಿದೆ. ರಂಗಭೂಮಿ ಬೆಳವಣಿಗೆ ಉದ್ದೇಶದಿಂದ ರಂಗಶಿಬಿರಗಳನ್ನು ಆಯೋಜಿಸಿದೆ. ನಾಡಿನ ಖ್ಯಾತ ರಂಗನಿರ್ದೇಶಕರನ್ನು ಆಹ್ವಾನಿಸಿ ರಂಗಶಿಸ್ತಿಗೆ ಒಳಪಡುವ ಉದ್ದೇಶದಿಂದ ಅವರ ನಿರ್ದೇಶನದಲ್ಲಿ ನಾಟಕಗಳನ್ನು ಪ್ರಯೋಗಿಸಿದೆ. ಈ ಯೋಜನೆಯ ಮೊದಲ ಕಾರ್ಯಕ್ರಮವಾಗಿ ಖ್ಯಾತ ರಂಗತಜ್ಞ ನಟರಾಜ್ ಹೊನ್ನವಳ್ಳಿ ಅವರ ನಿರ್ದೇಶನದಲ್ಲಿ ಗುಣಮುಖ ನಾಟಕವನ್ನು ಸಿದ್ಧಪಡಿಸಿದೆ. ಈ ನಾಟಕವನ್ನು ನಾಡಿನಾದ್ಯಂತ ಪ್ರದರ್ಶಿಸಲು ತಿರುಗಾಟ ಯೋಜನೆಯನ್ನು ಹಮ್ಮಿಕೊಂಡಿದೆ. ಸಾಣೆಹಳ್ಳಿಯ ನಿರ್ದೇಶಕ ವೈ.ಡಿ. ಬದಾಮಿ ಅವರ ನಿರ್ದೇಶನದಲ್ಲಿ ರಾಜಪ್ಪ ದಳವಾಯಿ ಅವರ ರಂಗಕೃತಿ ದಾರಾಶಿಕೊ ಏಕವ್ಯಕ್ತಿ ರಂಗಪ್ರಯೋಗವನ್ನು ನಿರ್ಮಿಸಿದೆ. ರಂಗಕಲೆಯೊಂದಿಗೆ ಇನ್ನೊಂದು ಕಲಾ ಪ್ರಕಾರಕ್ಕೂ ಅವಕಾಶ ನೀಡುವ ಉದ್ದೇಶದಿಂದ ರಂಗೋತ್ಸವಗಳನ್ನು ಹಮ್ಮಿಕೊಂಡ ಸಂದರ್ಭದಲ್ಲಿ ಸೃಜನಶೀಲ ಕಲಾವಿದರ ಛಾಯಾಚಿತ್ರ ಪ್ರದರ್ಶನ, ಚಿತ್ರಕಲಾ ಪ್ರದರ್ಶನ, ಕಲಾಕೃತಿಗಳ ಪ್ರದರ್ಶನಗಳನ್ನು ಏರ್ಪಡಿಸಿ ಜನಮೆಚ್ಚುಗೆ ಗಳಿಸಿದೆ. ನಮ್ಮ ತಂಡದ ಎಲ್ಲಾ ಕಾರ್ಯಕ್ರಮಗಳೂ ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾಗಿವೆ. ನಮ್ಟಮ್ ನಾಟಕಗಳೆಂದರೆ ತಪ್ಪದೆ ನೋಡಲು ಬರುವ ಪ್ರೇಕ್ಷಕರು ನಮ್ಮ ತಂಡಕ್ಕಿದ್ದಾರೆ. ಹೊಸತನ ಹಾಗೂ ಗುಣಮಟ್ಟದ ನಾಟಕಗಳನ್ನು ರಂಗದ ಮೇಲೆ ತರುವ ನಮ್ಮ ಉದ್ದೇಶಗಳು ಬಹು ಸಫಲವಾಗಿವೆ. ಇದಕ್ಕೆ ತಂಡದ ಸದಸ್ಯರು, ಪ್ರೇಕ್ಷಕರು ಹಾಗೂ ಹಿತೈಷಿಗಳ ನೆರವು ಕಾರಣ. ಅವರಿಗೆ ನಾವು ಕೃತಜ್ಞರು.
ರಂಗೋತ್ಸವಗಳು : ರಂಗಸುಗ್ಗಿ : ಸ್ವ-ನಿರ್ಮಿತ ೩ ಹಾಗೂ ಆಹ್ವಾನಿತ ೨ ನಾಟಕಗಳ ರಂಗೋತ್ಸವ ಚಳಿಗಾಲದ ನಾಟಕೋತ್ಸವ : ಸ್ವ-ನಿರ್ಮಿತ ೧ ಹಾಗೂ ಆಹ್ವಾನಿತ ೩ ನಾಟಕಗಳ ರಂಗೋತ್ಸವ ರಂಗ-ರಂಗು : ನೀನಾಸಂನ ೩ ನಾಟಕ ಹಾಗೂ ಕಲಾ ಪ್ರದರ್ಶನದ ಉತ್ಸವ ನೀನಾಸಂ ನಾಟಕೋತ್ಸವ : ಸತತ ೬ ವರ್ಷದಿಂದ ನೀನಾಸಂ ತಿರುಗಾಟದ ನಾಟಕಗಳ ಉತ್ಸವ. ಏಕವ್ಯಕ್ತಿ ರಂಗೋತ್ಸವ : ಸ್ವ-ನಿರ್ಮಿತ ೧ ಹಾಗೂ ಆಹ್ವಾನಿತ ೪ ಏಕವ್ಯಕ್ತಿ ರಂಗಪ್ರದರ್ಶನಗಳ ಉತ್ಸವ
0 comments:
Post a Comment